ಕಾನಾಡ ವೃತ್ತ
ಉತ್ತರ ಕನ್ನಡ ಜಿಲ್ಲೆಯ ಒಂದು ವಾರಪತ್ರಿಕೆ. ಆರಂಭವಾದ್ದು 1916ರಲ್ಲಿ, ಕುಮಟದಿಂದ. ಸ್ಟಾರ್ ಆಫ್ ಕೆನರ ಮುದ್ರಣಾಲಯದಿಂದ ಮುದ್ರಿತ ಮತ್ತು ಪ್ರಕಾಶಿತ. ಆರಂಭದ ಅಚ್ಚು-ಆಕಾರಗಳು ಬದಲಾಗಿಲ್ಲದಿರುವುದು ಇದರ ವೈಶಿಷ್ಟ್ಯ. ಮೊದಲು ಇದರಲ್ಲಿ ಕನ್ನಡ. ಮರಾಠಿ ಮತ್ತು ಇಂಗ್ಲಿಷ್‍ಗಳಲ್ಲಿ ಲೇಖನಗಳು ಪ್ರಕಟವಾಗುತ್ತಿದ್ದುವು. ಆರಂಭದಿಂದ 1926ರ ವರೆಗೆ ಕೃಷ್ಣರಾವ್ ಕೇಶವರಾವ್ ಶೆಣೈ ಇದರ ಸಂಪಾದಕರಾಗಿದ್ದರು. ಅನಂತರ ಅವರ ಮಗ ಪಾಂಡುರಂಗ ಕೃಷ್ಣ ಶಾನಭಾಗರು ಸಂಪಾದಕತ್ವ ವಹಿಸಿಕೊಂಡರು. ಆರಂಭದ ಬರೆಹಗಾರರಲ್ಲಿ (1916-1922) ಕೆಲವರು ನಾರಾಯಣ ಚಂದಾವರಕರ, ಎಸ್. ಜಿ. ವರ್ಟಿ, ವಿ. ಎಂ. ದುಭಾಷಿ, ಎನ್. ಎನ್.ಕಾಮತ್ ಮತ್ತು ವಿ. ಪಿ. ಪ್ರಭು. ಅನಂತರದ ಬರೆಹಗಾರರಲ್ಲಿ ಎನ್. ಜೆ. ಶಾನಭಾಗ, ಹ. ರಾ. ಮಾಂಜರೇಕರ, ಕೇಶವ ಯು. ಭಟ್ಟ ಇವರ ಲೇಖನಗಳು ಇತ್ತೀಚಿನವರೆಗೂ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುವು. 

	ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಈ ಪತ್ರಿಕೆ ಬ್ರಿಟಿಷ್ ಸರ್ಕಾರದ ಉಗ್ರ ವಿರೋಧಕ್ಕೂ ದಮನಕ್ಕೂ ಬಲಿಯಾಯಿತು. 1931, 1932 ಮತ್ತು 1934ರಲ್ಲಿ ಅನುಕ್ರಮವಾಗಿ ರೂ. 200, ರೂ. 100 ಮತ್ತು ರೂ. 100 ದಂಡಗಳನ್ನು ವಿಧಿಸಲಾಯಿತು. ಆದರೆ 1931-34ರಲ್ಲಿ ಉಚ್ಚ ನ್ಯಾಯಾಲಯದಲ್ಲಿಯ ಅಪೀಲಿನಲ್ಲಿ ಪತ್ರಿಕೆಗೆ ಗೆಲುವಾಯಿತು. ಸರ್ಕಾರಿ ವಕ್ರದೃಷ್ಟಿಯಿಂದಾಗಿ ಈ ನಡುವೆ 1931ರಲ್ಲಿ ನಾಲ್ಕು ತಿಂಗಳು ಮತ್ತು 1933-34ರಲ್ಲಿ 1 ವರ್ಷ 8 ತಿಂಗಳು ಪತ್ರಿಕೆಗಳನ್ನು ಸ್ಥಗಿತವಿಡಬೇಕಾಯಿತು. ಜಿಲ್ಲೆಯ ರಾಷ್ಟ್ರೀಯ ಚಳವಳಿಯ ಇತಿಹಾಸದಲ್ಲಿ ಮಹತ್ತ್ವದ ಪಾತ್ರ ನಿರ್ವಹಿಸಿದ ಈ ಪತ್ರಿಕೆ ಜಿಲ್ಲೆಯ ಆಡಳಿತ ಹಾಗೂ ಸಾರ್ವಜನಿಕ ಜೀವನದ ಎಲ್ಲ ಅನ್ಯಾಯ ದುವ್ರ್ಯವಹಾರಗಳ ಬಗೆಗೆ-ನಿರ್ಭಯ ಮತ್ತು ನಿರ್ದಾಕ್ಷಿಣ್ಯವಾದ ಲೇಖನಗಳನ್ನು ಪ್ರಕಟಿಸಿದೆ.										
	(ಜಿ.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ